ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ!
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ಬೆಂಗಳೂರು.
ವಿಧಾನಸಭೆಯ ಬೆನ್ನಲ್ಲೇ, ವಿಧಾನ ಪರಿಷತ್ತಿನಲ್ಲಿ ಶಾಲಾ ಮತ್ತು ಸಾಕ್ಷರತಾ ಇಲಾಖೆ ಇಂದು ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚೆ ನಡೆಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಚಾರ.
ಹಿಂದೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಜಮೀನುಗಳನ್ನು ನಿಸ್ವಾರ್ಥವಾಗಿ ನೀಡಿದ ದಾನಿಗಳು ಆಶಯವನ್ನು ಈ ಮಸೂದೆ ಎತ್ತಿಹಿಡಿಯಲಿದೆ. ದಾಖಲೆಗಳ ಕೊರತೆಯಿಂದ ಆಗಿರುವ ಸಮಸ್ಯೆಗಳನ್ನು ಸರಿಪಡಿಸಿ, ಜಮೀನುಗಳನ್ನು ಅಧಿಕೃತವಾಗಿ ಇಲಾಖೆ ಸುಪರ್ದಿಗೆ ತರುವ ಜೊತೆಗೆ ದಾನಿಗಳು ಹೆಸರನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.
ಕಳೆದ 12 ವರ್ಷಗಳಲ್ಲಿ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ಇಲಾಖೆಯ ಹೆಸರಿಗೆ ನೋಂದಣಿಯಾಗದ ಖಾಸಗಿ ಅಥವಾ ಇತರ ಜಮೀನುಗಳನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸಿ ಇಲಾಖೆ ಸುಪರ್ದಿಗೆ ಪಡೆಯಲು ಈ ವಿಧೇಯಕ ಹಾದಿ ಸುಗಮಗೊಳಿಸಿದೆ.
ಶಾಲೆಗಳ ಜಮೀನುಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆಯಲು ಮತ್ತು ಅನ್ಯ ಕಾರ್ಯಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ರಕ್ಷಣೆ ಒದಗಿಸಲು ಈ ಕಾನೂನು ಬಲ ತುಂಬಲಿದೆ.
ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ ಒಮ್ಮತದ ಅಂಗೀಕಾರಕ್ಕೆ ಕಾರಣರಾದ ಸನ್ಮಾನ್ಯ ಸಭಾಪತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. – ಸರ್ಕಾರಿ ಶಾಲೆ ಉಳಿಸೋಣ, ಬೆಳೆಸೋಣ.
– ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವರು.
