ಹೊಸಪೇಟೆಯಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ (ಹೊಸಪೇಟೆ).
ಹೊಸಪೇಟೆ ನಗರದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ ಅಟ್ಟಾಡಿಸಿ ಚಾಕುವಿನಿಂದ ಕತ್ತು, ಹೊಟ್ಟೆ ಭಾಗಕ್ಕೆ ಚುಚ್ಚಿ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಜೂ.13 ರಂದು ರಾತ್ರಿ ನಡೆದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಎಂಪಿ ಪ್ರಕಾಶ ನಗರದಲ್ಲಿ ಈ ಘಟನೆ ನಡೆದಿದ್ದು, ಯೂನೂಸ್ (28) ಕೊಲೆಯಾದ ಯುವಕ. ಹಾರ್ಡ್ವೇರ್ ಶಾಪ್ ನಡೆಸುತ್ತಿದ್ದ ರಾತ್ರಿ ಅಂಗಡಿ ಮುಚ್ಚಿಕೊಂಡು ಮನೆಗೆ ತೆರಳುವ ವೇಳೆ ಈ ಘಟನೆ ನಡೆದಿದೆ.
100 ಮೀಟರ್ ದೂರದಿಂದ ಅಟ್ಟಾಡಿಸಿಕೊಂಡು ಬಂದು ಚಾಕುವಿನಿಂದ ಚುಚ್ಚಿ ಇಬ್ಬರು ಯುವಕರು ಕೊಲೆಗೈದಿದ್ದಾರೆ ಎನ್ನಲಾಗಿದೆ. ರಸ್ತೆಯ ಮೇಲೆ ಬಿದ್ದ ಯುವಕನ ಮೃತ ದೇಹವನ್ನು ಗ್ರಾಮೀಣ ಠಾಣೆ ಪೊಲೀಸರು ಆಸ್ಪತ್ರೆ ರವಾನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಮುಂದೆ ನೂರಾರು ಯುವಕರು, ಜನರು ಜಮಾಯಿಸಿದ್ದರು.
ಬಳಿಕ ಹೊಸಪೇಟೆ ಪಟ್ಟಣ ಠಾಣೆಗೆ ಬಂದು ಕೊಲೆ ಮಾಡಿದ ಇಬ್ಬರು ಆರೋಪಿಗಳು ತಾವೇ ಕೊಲೆ ಮಾಡಿದ್ದೇವೆ ಎಂದು ಚಾಕು ಸಮೇತ ಪೊಲೀಸರಿಗೆ ಶರಣಾಗಿದ್ದಾರೆ. ಹೊಸಪೇಟೆ ನಿವಾಸಿಗಳಾದ ಖಾಜಾ, ಇರ್ಫಾನ್ ಕೊಲೆ ಆರೋಪಿಗಳು. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಯೂನಸ್ ತಂದೆ ನಜೀರ್ ಅಹ್ಮದ್ ಪ್ರತಿಕ್ರಿಯಿಸಿ,
‘ನನ್ನ ಮಗ, ತಾನಾಯ್ತು, ತನ್ನ ಕೆಲಸ ಆಯ್ತು ಅನ್ನೋ ಹಾಗೆ ಇದ್ದ. ಅವನಿಗೆ ಮದುವೆಯಾಗಿ ಒಂದು ಮಗು ಇದೆ, ಅವನ ಹೆಂಡತಿ ಈಗ ಗರ್ಭಿಣಿಯಿದ್ದಾಳೆ. ಅವನು ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದ, ಇದು ಯಾಕಾಯ್ತು ಅಂತ ಗೊತ್ತಿಲ್ಲ. ಊಟಕ್ಕೆ ಬರ್ತಿಯಾ ಅಂತ ನಾನು 9-45 ಕ್ಕೆ ಕರೆ ಮಾಡಿದೆ. ಇನ್ನೊಂದು ಹತ್ತು ನಿಮಿಷ ಬರುವೆ ಅಪ್ಪ ಅಂತ ಅಂದ. ಇಷ್ಟೋತ್ತಿಗಾಗಲೇ, ನನ್ನ ಮಗನ ಕೊಲೆ ಮಾಡಿರೋ ವಿಚಾರ ಗಮನಕ್ಕೆ ಬಂತು. ಯಾಕೆ ಕೊಲೆ ಆಯ್ತು, ಏನು ಅಂತ ನಮಗೆ ಗೊತ್ತಿಲ್ಲ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದರು.
ಈ ವೇಳೆ ವಿಜಯನಗರ ಜಿಲ್ಲಾ ಅಡಿಶನಲ್ ಎಸ್ಪಿ ಮಂಜುನಾಥ, ಡಿವೈಎಸ್ಪಿ ಮುರಳೀಧರರಾವ್, ಗ್ರಾಮೀಣ ಠಾಣೆ ಪಿಐ ಗುರುರಾಜ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
