ಮಂಗಬುದ್ಧಿಯ ಜನ ಯಾರು?
ಇಂಗಿತ ಜ್ಞಾನವಿಲ್ಲದ ಬಂಧು ಪರಿವಾರ
ಹಂಗಿಸುವ ಛಲವುಳ್ಳ ಸತಿ ಪುತ್ರ ಸಖರು |
ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ
ಮಂಗಬುದ್ಧಿ ಜನರು – ಮಂಕುತಿಮ್ಮ ||
ಪರರ ಅಭಿಪ್ರಾಯವನ್ನು ತಿಳಿಯುವ ಜ್ಞಾನವಿಲ್ಲದ ಬಂಧು ಪರಿವಾರ, ಹೀಯಾಳಿಸುವ ಛಲವುಳ್ಳ ಹೆಂಡತಿ ಮಕ್ಕಳು ಸ್ನೇಹಿತರು, ಬಂಗಾರದ ಖಡ್ಗ ಚುಚ್ಚಿದರೆ ಅದನ್ನು ಬೊಟ್ಟೆಂದು ತಿಳಿಯುವ ಜನರು ಮಂಗಬುದ್ಧಿಯವರು.
ಇತರರ ಮನಸ್ಸಿನೊಳಕ್ಕಿಳಿದು ಅವರ ಅಭಿಪ್ರಾಯವನ್ನು ತಿಳಿಯುವ ಜ್ಞಾನವೇ ಇಂಗಿತ ಜ್ಞಾನ. ನಮ್ಮ ಬಂಧುಗಳೆಲ್ಲ ಇಂಗಿತ ಜ್ಞಾನವಿಲ್ಲದವರು. ನಮ್ಮ ವಾಸ್ತವ ಸ್ಥಿತಿಯನ್ನು ತಿಳಿಯದೆ ನಮ್ಮ ಬಂಧುಗಳು ನಮಗೆ ಸಲಹೆ ಸೂಚನೆ ನೀಡುತ್ತಾರೆ. ಆ ಸಲಹೆಗಳಿಂದ ನಾವು ಕಷ್ಟಕ್ಕೆ ಸಿಲುಕಿ ಕೊಳ್ಳುವ ಸಂಭವವೇ ಹೆಚ್ಚು. ನಮ್ಮ ಪತ್ನಿ, ಸುತರು ಹಾಗೂ ಗೆಳೆಯರು ಸದಾ ನಮ್ಮನ್ನು ಹೀಯಾಳಿಸುವ ಛಲವುಳ್ಳವರು. ಬಂಗಾರದ ಖಡ್ಗ ಚುಚ್ಚಿ ಗಾಯವಾದರೆ ಅದನ್ನು ಶೃಂಗಾರದ ಪಟ್ಟು ಎಂದು ತಿಳಿಯುವವರು ಇದ್ದಾರೆ. ಇವರೆಲ್ಲ ಮಂಗ ಬುದ್ಧಿಯ ಜನರು. ಅವರ ಮಾತುಗಳನ್ನು ನಾವು ಯಥಾವತ್ತಾಗಿ ಸ್ವೀಕರಿಸಿದರೆ ಅಪಾಯಗಳನ್ನು ಎದುರುಗೊಂಡಂತೆ. ಆದ್ದರಿಂದ ನಮ್ಮ ಬಂಧು ಬಳಗದವರಿಂದ ಎಚ್ಚರವಾಗಿರಬೇಕು.
