ವಿಜಯನಗರ : ಕೌಟುಂಬಿಕ ಕಲಹಕ್ಕೆ ಭೀಕರ ಕೊಲೆ; ಪೂಜೆ ಮಾಡುತ್ತಿದ್ದ ಪತ್ನಿಯ ಕತ್ತು ಕೊಯ್ದು ಕೊಂದ ಪತಿ!

Spread the love

ತ್ಯಾಗಭೂಮಿ ಡಿಜಿಟಲ್‌ ಡೆಸ್ಕ್, ವಿಜಯನಗರ (ಹೊಸಪೇಟೆ).

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನದೇ ಪತ್ನಿಯ ಕತ್ತನ್ನು ಚಾಕುವಿನಿಂದ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಹೊಸಪೇಟೆ ಪಟ್ಟಣದ ಆಗಸರ ಓಣಿಯಲ್ಲಿ ನಡೆದಿದೆ.

​ಪ್ರಭಾವತಿ (50) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಪತ್ನಿಯನ್ನೇ ಕೊಂದ ರಾಮಮೂರ್ತಿ (55) ಬಂಧಿತ ಆರೋಪಿಯಾಗಿದ್ದಾನೆ.

​ಪೂಜೆ ಮಾಡುತ್ತಿದ್ದಾಗಲೇ ಮುಗಿಬಿದ್ದ ಪತಿ!

​ಪೊಲೀಸ್ ಮೂಲಗಳ ಪ್ರಕಾರ, ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಎಂದಿನಂತೆ ಇಂದು ಬೆಳಿಗ್ಗೆ ಪ್ರಭಾವತಿ ಅವರು ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದರು. ಈ ವೇಳೆ ಮತ್ತೊಮ್ಮೆ ಗಲಾಟೆ ಆರಂಭವಾಗಿದ್ದು, ಕೋಪೋದ್ರಿಕ್ತನಾದ ಪತಿ ರಾಮಮೂರ್ತಿ, ಪೂಜೆ ಮಾಡುತ್ತಿದ್ದ ಪತ್ನಿಯ ಮೇಲೆಯೇ ಚಾಕುವಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ಪ್ರಭಾವತಿ ಅವರ ಕತ್ತನ್ನು ಚಾಕುವಿನಿಂದ ಕೊಯ್ದು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

​ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ

​ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್. ಜಾಹ್ನವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಮಂಜುನಾಥ್ ಹಾಗೂ ಡಿವೈಎಸ್ಪಿ ಮುರುಳಿಧರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಆರೋಪಿ ಪೊಲೀಸ್ ವಶಕ್ಕೆ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಆರೋಪಿ ರಾಮಮೂರ್ತಿ ಪೊಲೀಸರಿಗೆ ಶರಣಾಗಿದ್ದು, ಹೊಸಪೇಟೆ ಪಟ್ಟಣ ಠಾಣೆಯ ಪೊಲೀಸರು ಆತನನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.

​ಈ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇಡೀ ಘಟನೆಯಿಂದ ಆಗಸರ ಓಣಿಯಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *