ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ತುಂಗಭದ್ರಾ ಜಲಾಶಯಕ್ಕೆ ಭೇಟಿ.
ತ್ಯಾಗಭೂಮಿ ವರ್ಷ ಡೆಸ್ಕ್, ವಿಜಯನಗರ (ಹೊಸಪೇಟೆ).
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇ 3 ರಂದು ಬೆಳಿಗ್ಗೆ 9.10 ಗಂಟೆಗೆ ಕನ್ನಡ ವಿಶ್ವವಿದ್ಯಾಲಯ ಆವರಣದ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆಯ ಮೂಲಕ 9.30 ಗಂಟೆಗೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾಮಗಾರಿಯ ಪರಿವೀಕ್ಷಣೆ ನಡೆಸಲಿದ್ದಾರೆ.
ಜಲಾಶಯಕ್ಕೆ ಅಳವಡಿಸಲಾದ ಹೊಸ ಕ್ರಸ್ಟ್ ಗೇಟ್ ವೀಕ್ಷಣೆಗೆ ಸೇರಿದಂತೆ ಅನೇಕ ವಿಚಾರಗಳನ್ನು ಚರ್ಚಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ.ಬಿ.ಖಂಡ್ರೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್.ಎಸ್.ತಂಗಡಗಿ, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಭಾಗವಹಿಸಲಿದ್ದಾರೆ.
2024 ರ ಆಗಸ್ಟ್ 10 ರಂದು ಮಧ್ಯರಾತ್ರಿ ಜಲಾಶಯದ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ಕಿತ್ತು ಹೋಗಿತ್ತು. ಅದಾದ ಬಳಿಕ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಹರಿಯೋ ನೀರಿನಲ್ಲಿ ಸ್ಟಾಪ್ ಲಾಗ್ ಅಳವಡಿಕೆ ಮಾಡಿದ್ರು. ಬಳಿಕ ಅಧ್ಯಯನ ಮಾಡಿದ ಕನ್ಹಯ್ಯ ನಾಯ್ಡು ಮತ್ತು ಅವರ ತಂಡ ಜಲಾಶಯದ ಎಲ್ಲಾ ಗೇಟ್ ಗಳು ತೆರವುಗೊಳಿಸಿ, ಹೊಸ ಗೇಟ್ ಅಳವಡಿಕೆಗೆ ಸೂಚನೆ ನೀಡಿತ್ತು.
ಅದಾದ ಬಳಿಕ ನಾರಾಯಣ, ಹಿಂದೂಸ್ತಾನ್, ಜಿಂದಾಲ್ ಕಂಪನಿಗಳು ಗೇಟ್ ರೆಡಿ ಮಾಡಲು ಪ್ರಾರಂಭಿಸಿದ್ದವು. ಡಿಸೆಂಬರ್ 24 ರಿಂದ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಪ್ರಾರಂಭ ಮಾಡಲಾಗಿತ್ತು.
ಅಂದಿನಿಂದ ಇಂದಿನವರೆಗೆ ಗೇಟ್ ಅಳವಡಿಕೆಗೆ ಕಾರ್ಯ ನಡೆಯುತ್ತಿದೆ. ಸದ್ಯ ಹಳೇಯ 33 ಕ್ರಸ್ಟ್ ಗೇಟ್ ತೆಗೆದು, ಹೊಸ ಗೇಟ್ ಅಳವಡಿಕೆ ಮಾಡಲಾಗಿದೆ. 73 ವರ್ಷದ ಹಳೇಯ ಗೇಟ್ ಗಳು, ಇತಿಹಾಸದ ಪುಟ ಸೇರಿವೆ.
ಹೊಸ ಗೇಟ್ ಅಳವಡಿಕೆ ಮಾಡಿದ ಬಳಿಕ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಡಿಸಿಎಂ ಡಿಕೆ. ಶಿವಕುಮಾರ್ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ವೀಕ್ಷಣೆ ಮಾಡಲಿದ್ದಾರೆ.
