ಕುರುವತ್ತಿ ಮಲ್ಲಿಕಾರ್ಜುನ, ಬಸವೇಶ್ವರಸ್ವಾಮಿ ರಥೋತ್ಸವ ಅದ್ದೂರಿ.
ತ್ಯಾಗಭೂಮಿ ಡಿಜಿಟಲ್ ಡೆಸ್ಕ್, ವಿಜಯನಗರ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಕುರುವತ್ತಿಯ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶಿವರಾತ್ರಿ ಅಮಾವಾಸ್ಯೆ ದಿನ ಸಂಭ್ರಮದಿಂದ ಜರುಗಿತು.
ಶ್ರೀ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತೀರಿಸಿದರು, ಶ್ರೀಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಸಕಲ ಮಂಗಳವಾದ್ಯಗಳೊಂದಿಗೆ ರಥ ಬೀದಿ ಮೂಲಕ ಮೆರವಣಿಗೆ ಮಾಡಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಶಿವರಾತ್ರಿ ಅಮವಾಸ್ಯೆ ದಿನ, ಮಾಘ ನಕ್ಷತ್ರ ಕೂಡಿ ಬಂದಾಗ ರಥೋತ್ಸವಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಗೆ ಆಗಮಿಸಿದ ಭಕ್ತ ಸಮೂಹ ತಮ್ಮ ಎತ್ತುಗಳಿಗೆ ಗೆಜ್ಜೆಸರ, ಬಣ್ಣದ ಬಲೂನ್ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ್ದರು. ಇದಕ್ಕೂ ಮೊದಲು ದೇವಸ್ಥಾನದಿಂದ ರಥ ಬೀದಿಯವರೆಗೂ ಎತ್ತಿನ ಮೆರವಣಿಗೆ ನಡೆಸಲಾಯಿತು. ಗದಗ, ಹಾವೇರಿ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ತಮ್ಮ ಹರಕೆ ತೀರಿಸಿದರು.


